ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಕಿನ್ನಿಮುಲ್ಕಿ

ನಮ್ಮ ಸಂಸ್ಥೆಯ ಬಗ್ಗೆ

ಆಗಿನ ದಕ್ಷಿಣ ಕನ್ನಡ ಜಿಲ್ಲೆಗೆ ಒಳಪಟ್ಟ ಉಡುಪಿ ತಾಲೂಕು ಕಾರ್ಯವ್ಯಾಪ್ತಿಗೆ ಸೀಮಿತವಾಗಿಟ್ಟು ರೂರಲ್ ಇಂಡಸ್ಟ್ರೀಸ್ ಬೆಂಗಳೂರು ಇದರ ನಿರ್ದೇಶಕರು ದಿನಾಂಕ: 07-02-1958ರಲ್ಲಿ ನೋಂದಣಿ ಸಂಖ್ಯೆ: DRI 13, ರಲ್ಲಿ ನೋಂದಣಿ ಮಾಡಿರುತ್ತಾರೆ. ಸಂಘದ ಪ್ರಥಮ ಸರ್ವ ಸದಸ್ಯರ ಮಹಾಸಭೆಯು ಹಿಂದಿನ ಉಡುಪಿ ಸಹಕಾರಿ ಹಾಲು ಸರಬರಾಜು ಸಂಘ ಉಡುಪಿ ಇದರಆವರಣದಲ್ಲಿ ದಿನಾಂಕ 28-02-1958 ರಂದು ಜರಗಿದ್ದು ಆ ದಿನದ ಸಭೆಯಲ್ಲಿ 31 ಜನ ಸದಸ್ಯರು ಹಾಜರಾಗಿದ್ದು, ಮಾಜಿ ವಿಧಾನ ಸಭಾ ಸದಸ್ಯರು ದಿ| ಯು.ಎಸ್.ನಾಯಕ್‌ರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಹಾಜರಾದ ಎಲ್ಲಾ ಸದಸ್ಯರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತಾ ಸಂಘದ ಕಿರು ಪರಿಚಯವನ್ನು ತಮ್ಮ ಮುಂದಿಡಲು ಸಂತೋಷಪಡುತ್ತೇವೆ.

ಕಿರುಕೈಗಾರಿಕೆಗಳಿಗೆ ಆರ್ಥಿಕ ಸಹಾಯ ಒದಗಿಸುವ ಉದ್ದೇಶದಿಂದ ಸ್ಥಾಪನೆಯಾದ ಈ ಸಂಘವು ಹಲವು ಏಳು ಬೀಳುಗಳನ್ನು ಕಂಡಿರುತ್ತದೆ.

ಪ್ರಾರಂಭದಲ್ಲಿ ಕರ್ನಾಟಕ ಕೈಗಾರಿಕಾ ಸಹಕಾರಿ ಬ್ಯಾಂಕಿನಿಂದ ಆರ್ಥಿಕ ಸಹಾಯ ಪಡೆದು ಗುಡಿಕೈಗಾರಿಕೆ ಮತ್ತು ಕುಶಲಕರ್ಮಿ ಸದಸ್ಯರಿಗೆ ಸಾಲವನ್ನು ಸಂಘವು ಒದಗಿಸುತ್ತಿತ್ತು. ಈ ವ್ಯವಹಾರದಲ್ಲಿ ಸಂಘಕ್ಕೆ ಅಲ್ಪ ಪ್ರಮಾಣದ ಬಡ್ಡಿರಿಯಾಯಿತಿ ಲಭ್ಯ ಆಗುತ್ತಿದ್ದು, ಸಂಘವು ಉತ್ತಮ ರೀತಿಯಿಂದ ಕಾರ್ಯ ಸಾಧನೆ ಮಾಡಲು ಸಾಧ್ಯವಾಗದೆ ಇರುವುದರಿಂದ 1979ರ ತನಕ ಸಂಘದ ವ್ಯವಹಾರದಲ್ಲಿ ಯಾವುದೇ ರೀತಿಯ ಪ್ರಗತಿಯಿಲ್ಲದೆ ಕಾರ್ಯ ನಿರ್ವಹಿಸುತ್ತಿದ್ದ ಸಂಘವನ್ನು ಪುನಶ್ಚೇತನ ನೀಡುವ ಉದ್ದೇಶದಿಂದ ಸಂಘದ ಆಗಿನ ಆಡಳಿತ ಮಂಡಳಿಯು ಶ್ರೀ ಟಿ. ಶಂಭು ಶೆಟ್ಟಿಯವರ ಮಾರ್ಗದರ್ಶನದಲ್ಲಿ ದಿ| ಡಾ.ಎಸ್.ರಮಾನಂದ ಭಟ್‌ರವರ ಅಧ್ಯಕ್ಷತೆಯಲ್ಲಿ, ಕಾರ್ಯದರ್ಶಿಯಾಗಿ ಶ್ರೀ ಬಿ. ಭಾಸ್ಕರ್ ಕಾಮತ್‌ರವರನ್ನು ನೇಮಕ ಮಾಡಿ ಹೊಸ ಹುಮ್ಮಸ್ಸಿನಿಂದ ಸಂಘದ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಿ ಕೆಲಸ ಮಾಡಲು ಪ್ರಾರಂಭಿಸಿದ್ದು, ಸಂಘದ ಸದಸ್ಯರ ಸಹಕಾರ, ಸಂಘವು ಪ್ರಾರಂಭವಾದಾಗಿನಿಂದ ಸೇವೆ ಸಲ್ಲಿಸಿದ ಸಂಘದ ಆಡಳಿತ ಮಂಡಳಿ ಸದಸ್ಯರ, ಅಧ್ಯಕ್ಷರ, ಉಪಾಧ್ಯಕ್ಷರ, ಮುಖ್ಯ ಕಾರ್ಯ ನಿರ್ವಹಾಣಾಧಿಕಾರಿಯವರ ಮತ್ತು ಸಿಬ್ಬಂದಿಗಳ ನಿಸ್ವಾರ್ಥ ಸೇವೆಯೇ ಸಂಘವು ಈ ಕೆಳಗಿನ ಪ್ರಮಾಣದಲ್ಲಿ ಬೆಳೆದು ಬರಲು ಕಾರಣವಾಗಿರುತ್ತದೆ.
2019-20ರ ಅಂತ್ಯದಲ್ಲಿ
ಸದಸ್ಯತ್ವ 29796
ಪಾಲು ಬಂಡವಾಳ ರೂ. 2,41,81,935.00
ನಿಧಿಗಳು ರೂ. 10,82,40,206.58
ಠೇವಣಿಗಳು ರೂ. 1,11,45,16,932.46
ಸಾಲಗಳು ರೂ. 1,01,36,72,221.48
ಸಾಲಗಳು: ಪ್ರಸ್ತುತ ಸಂಘವು ಸದಸ್ಯರಿಗೆ ವಿವಿಧ ರೀತಿಯ ಸಾಲವನ್ನು ನೀಡುತ್ತಿದ್ದು, ಈ ಬಗ್ಗೆ ಸಂಘವು ತನ್ನ ಉಪನಿಬಂಧನೆಯಲ್ಲಿ ಅವಕಾಶವನ್ನು ಕಲ್ಪಿಸಿಕೊಂಡಿರುತ್ತದೆ. ಕೈಗಾರಿಕಾ ಉದ್ದೇಶಗಳಿಗಾಗಿ, ಗೃಹ ನಿರ್ಮಾಣಗಳಿಗಾಗಿ, ವ್ಯಾಪಾರ ಅಭಿವೃದ್ಧಿಗಾಗಿ ಮತ್ತು ಇನ್ನಿತರ ಸಣ್ಣಪುಟ್ಟ ಕಸುಬುಗಳಿಗಾಗಿ ಜಾಮೀನು ಆಧಾರಿತ ಸಾಲ ನೀಡುತ್ತದೆ. ಇದರ ಜೊತೆಗೆ ವಾಹನ ಖರೀದಿ ಸಾಲ, ಚಿನ್ನಾಭರಣ ಸಾಲ, ಭೂಖರೀದಿಗಾಗಿ ಸಾಲ ಹಾಗೂ ಸದಸ್ಯರ ಮರುಪಾವತಿಯ ಸಾಮರ್ಥ್ಯವನ್ನು ಪರಿಗಣಿಸಿ ಅವರ ಆರ್ಥಿಕ ಸ್ವಾವಲಂಬನೆಗಾಗಿ ಸಂಘವು ಸಾಲವನ್ನು ಪೂರೈಸುತ್ತಿದ್ದು ಸಾಲದ ವಸೂಲಾತಿಯಲ್ಲಿ ತೃಪ್ತಿಕರ ಸಾಧನೆಯನ್ನು ಮಾಡಿರುತ್ತದೆ.
ನಿಧಿಗಳು: ಸಂಘವು ಆರ್ಥಿಕ ಸ್ವಾವಲಂಬನೆಗಾಗಿ ಹಲವು ರೀತಿಯ ನಿಧಿಗಳನ್ನು ಸೃಷ್ಟಿ ಮಾಡಿರುತ್ತದೆ. 1985-86ನೇ ಸಾಲಿನ ನಂತರ ಸಂಘವು ಸತತವಾಗಿ ಲಾಭ ಗಳಿಸಿರುವುದರಿಂದ 2019-20ರಲ್ಲಿ ನಿಧಿಗಳಲ್ಲಿ ಕಾಯ್ದಿರಿಸಿದ್ದು ಒಟ್ಟು ರೂ.10,82,40,206.58 ಆಗಿರುತ್ತದೆ. ಇದು ಸಂಘದ ಸ್ವಂತ ಸಂಪನ್ಮೂಲವಾಗಿದ್ದು ಮುಂದಿನ ವರ್ಷಗಳಲ್ಲಿ ಇದಕ್ಕಿಂತ ಹೆಚ್ಚು ಸ್ವಂತ ಸಂಪನ್ಮೂಲ ಹೊಂದಲು ಉದ್ದೇಶಿಸಲಾಗಿದೆ.
ಸಿಬ್ಬಂದಿ ವರ್ಗ: 2016 ರಿಂದ ಶ್ರೀ ರಾಜೇಶ್ ಹೆಗ್ಡೆ ಇವರು ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಧಾನ ಆಡಳಿತ ಕಚೇರಿ 9 ಶಾಖಾ ಕಚೇರಿಗಳು ಮತ್ತು ಮುದ್ರಣ ಘಟಕ ಸೇರಿದಂತೆ ಒಟ್ಟು 10 ಕೇಂದ್ರಗಳಲ್ಲಿ 54 ಜನ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಲ್ಲಾ ನೌಕರರು ಅವರವರಿಗೆ ವಹಿಸಿಕೊಟ್ಟ ಜವಾಬ್ದಾರಿಗನುಗುಣವಾಗಿ ಕೆಲಸವನ್ನು ನಿರ್ವಹಿಸುತ್ತಿದ್ದು ಕೆಲಸವು ತೃಪ್ತಿಕರವಾಗಿರುತ್ತದೆ. ಸಂಘದ ಸಿಬ್ಬಂದಿಗಳ ಜೊತೆಯಲ್ಲಿ ದೈನಿಕ ಠೇವಣಿ ಏಜೆಂಟರನ್ನು ಮತ್ತು ಆಭರಣ ಪರಿವೀಕ್ಷಕರನ್ನು ನೆನಪಿಸಿಕೊಳ್ಳುವುದು ಅಗತ್ಯವಿದ್ದು ಒಟ್ಟು 33 ಜನ ದೈನಿಕ ಠೇವಣಿ ಏಜೆಂಟರು ಮತ್ತು 9 ಜನ ಆಭರಣ ಪರಿವೀಕ್ಷಕರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು ಸಂಘದ ಸಿಬ್ಬಂದಿಗಳಿಂದ, ಪಿಗ್ಮಿ ಏಜೆಂಟರಿಂದ ಹಾಗೂ ಸರಾಫರಿಂದ ಮುಂದಿನ ವರ್ಷಗಳಲ್ಲಿ ಉತ್ತಮ, ಪ್ರಾಮಾಣಿಕ ಹಾಗೂ ಸಂಘದ ಬೆಳವಣಿಗೆಗೆ ಪೂರಕವಾದ ಸೇವೆಯನ್ನು ನಿರೀಕ್ಷಿಸಲಾಗಿದೆ.
ಲಾಭ ನಷ್ಟ: ಸಂಘವು 1988 ರಿಂದ ಸತತವಾಗಿ ಲಾಭಗಳಿಸುತ್ತಾ ಬಂದಿರುತ್ತದೆ. ಸಂಘವು ಪ್ರತೀ ವರ್ಷ ಸದಸ್ಯರಿಗೆ ಶೇ.12 ರಿಂದ 18 ರ ತನಕ ಪಾಲುಮುನಾಫೆಯನ್ನು ನೀಡಿರುತ್ತದೆ. ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚು ಲಾಭಗಳಿಸಿ ಸದಸ್ಯರಿಗೆ ಮತ್ತು ಗ್ರಾಹಕರಿಗೆ ಶೀಘ್ರ, ಉತ್ತಮ ಸೇವೆ ಸಲ್ಲಿಸುವ ಹಾಗೂ ಪಾಲು ಮುನಾಫೆಯನ್ನು ಹಂಚುವ ಮಹಾತ್ವಾಕಾಂಕ್ಷೆ ಹೊಂದಿರುತ್ತದೆ.